
ಸಕಲೇಶಪುರ : ಸಾರಿಗೆ ಇಲಾಖೆಯಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದ ಮೇಲೆ ರಾಜ್ಯ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಿಸಿದ್ದು, ವಾಹನ ಮಾಲೀಕರು ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಮನವಿ ಮಾಡಿದ್ದಾರೆ.ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಟಿಡಿ 27 ಟಿಡಿಒ 2023, 4 ಜೂನ್ 2026 ಸಾಲಿನ ಅನ್ವಯ ಈ ವಿಶೇಷ ರಿಯಾಯಿತಿ ಯೋಜನೆ ಜಾರಿಗೊಳಿಸಲಾಗಿದೆ. 1991ರಿಂದ 2022ರ ಅವಧಿಯಲ್ಲಿ ದಾಖಲಾಗಿದ್ದು, ಇನ್ನೂ ದಂಡ ಪಾವತಿಗೆ ಬಾಕಿ ಇರುವ ಸಾರಿಗೆ ಇಲಾಖೆಯ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.ಸರ್ಕಾರದ ಆದೇಶದಂತೆ ಜೂನ್ 21ರಿಂದ ಜುಲೈ 10ರವರೆಗೆ ಒಟ್ಟು 20 ದಿನಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಬಾಕಿ ಪ್ರಕರಣಗಳ ದಂಡದ ಮೊತ್ತದ ಶೇ.50ರಷ್ಟನ್ನು ಪಾವತಿಸುವ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.ಸಾರ್ವಜನಿಕ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಈ ಯೋಜನೆಯ ಮಾಹಿತಿಯನ್ನು ಹೆಚ್ಚಿನ ಸಂಖ್ಯೆಯ ವಾಹನ ಮಾಲೀಕರಿಗೆ ತಲುಪಿಸಲು ಸ್ಥಳೀಯ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳು, ಡಿಜಿಟಲ್ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಪ್ರಚಾರ ನಡೆಸುವಂತೆ ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಮನವಿ ಮಾಡಿದೆ.ಹಲವು ವರ್ಷಗಳಿಂದ ಬಾಕಿ ಉಳಿದಿರುವ ಸಾರಿಗೆ ಇಲಾಖೆಯ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ಅಪರೂಪದ ಅವಕಾಶವಾಗಿದ್ದು, ಅರ್ಹ ವಾಹನ ಮಾಲೀಕರು ಸರ್ಕಾರದ ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ಅಧಿಕಾರಿಗಳು ಕೋರಿದ್ದಾರೆ
