


ಸಕಲೇಶಪುರ: ಪಟ್ಟಣದ ಅಗ್ರಹಾರ ಬಡಾವಣೆಯ (ನಾಲ್ಕನೇ ವಾರ್ಡ್)ನ ಮುಖ್ಯರಸ್ತೆಯಲ್ಲಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ದೀಪಗಳು ಇದ್ದರೂ, ದೀಪಗಳು ಒಂದು ವಾರದಿಂದ ಕಾರ್ಯನಿರತವಾಗಿಲ್ಲ. ಸಾರ್ವಜನಿಕರಿಗೂ ರಾತ್ರಿ ವೇಳೆ ತಿರುಗಾಡುವುದಕ್ಕೂ ಬಹಳ ತೊಂದರೆ ಅನುಭವಿಸುತ್ತಿದ್ದಾರೆ.ಸ್ಥಳೀಯರು ವಿದ್ಯುತ್ ಇಲಾಖೆ (ಕೆಇಬಿ) ಗೆ ದೂರವಾಣಿ ಮಾಡಿ ಬೀದಿ ದೀಪದ ಬಗ್ಗೆ ದೂರು ನೀಡಿದಾಗ, “ಈ ವಿಷಯ ಪುರಸಭೆಗೆ ಸೇರಿದ್ದು ಎಂದು ಹೇಳಿದ್ದಾರೆ. ಆದರೆ ಇದುವರೆಗೆ ಸಂಬಂಧಪಟ್ಟ ಇಲಾಖೆ ದೀಪಗಳನ್ನು ಸರಿಪಡಿಸಿಲ್ಲ ಎಂಬುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.ಅಗ್ರಹಾರ ಬಡಾವಣೆ ತುಂಬಾ ಮನೆಗಳಿರುವ ಬಡಾವಣೆಯಾಗಿದ್ದು ವಿದ್ಯುತ್ ದೀಪದ ನಿರ್ವಹಣೆ ನಡೆದಿಲ್ಲ ಎಂಬುದು ಆಘಾತಕಾರಿಯಾಗಿದೆ. ಒಂದು ವಾರದ ಹಿಂದೆ ಬಂದ ಗಾಳಿ ಮಳೆಗೆ ಕಂಬದಲಿದ್ದ ವಿದ್ಯುತ್ ದೀಪದ ಸೆಟ್ ಕಳಚಿ ಕೆಳಕ್ಕೆ ಬಿದ್ದಿದ್ದು, ಅದನ್ನು ಸರಿಪಡಿಸುವುದಕ್ಕೆ ಇನ್ನೂ ಬಂದಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ.ಆಗ್ರಹ: ಬೀದಿ ದೀಪದ ಸಮಸ್ಯೆ ತೀವ್ರವಾಗಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
